<div id="MiddleColumn_internal"> <h3 style="text-align: justify; ">ಸಾಂತ್ವನ</h3> <p style="text-align: justify; ">ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸಾಂತ್ವನ ಯೋಜನೆಯನ್ನು 2000-2001 ನೇ ಸಾಲಿನಲ್ಲಿ ಮಂಜೂರು ಮಾಡಲಾಯಿತು. ಇಂತಹ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ ಪರಿಹಾರ, ಹಾಗೂ ತರಬೇತಿ ನೀಡಿ ಸ್ವಾವಲಂಬಿಗಳಾಗುವಂತೆ ಮಾಡಿ ಸ್ವತಂತ್ರ ಬದುಕು ಸಾಗಿಸಲು ನೆರವಾಗುವುದರ ಜೊತೆಗೆ, ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿರುತ್ತದೆ.<br /><br />ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಪ್ರತಿಯೊಂದು ಕೇಂದ್ರದಲ್ಲಿ ಶುಲ್ಕ ರಹಿತ ದೂರವಾಣಿ ಒದಗಿಸಲಾಗಿದೆ. ಈ ಮಹಿಳಾ ಸಹಾಯವಾಣಿಯು ದಿನದ 24 ಗಂಟೆಗಳೂ ಸಂಕಷ್ಟಕ್ಕೊಳಕಾದ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸುತ್ತದೆ. ಇಂತಹ ಮಹಿಳೆಯರಿಗೆ ಜಿಲ್ಲಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಅವಶ್ಯ ಸೌಲಭ್ಯ ಹಾಗು ಪುನರ್ವಸತಿ ಸೇವೆಗಳನ್ನು ಪ್ರತಿ ಪ್ರಕರಣದ ಅರ್ಹತೆ ಗನುಗುಣವಾಗಿ ನೀಡಲಾಗುತ್ತದೆ.<br /><br />ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಕ್ಷಣ ಆರ್ಥಿಕ ನೆರವು ಅವಶ್ಯಕತೆ ಇದ್ದಲ್ಲಿ 2000 ರೂಪಾಯಿಂದ ಗರಿಷ್ಥ 10,000 ರೂಪಾಯಿಗಳವರೆಗೆ ನೆರವು ನೀಡಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 172 ಸಾಂತ್ವನ ಕೇಂದ್ರಗಳು ಕಾರ್ಯನಿರತವಾಗಿವೆ.</p> <p style="text-align: justify; ">2013-14ನೇ ಸಾಲಿನಲ್ಲಿ ರೂ.425.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಇದರೊಂದಿಗೆ ಹೆಚ್ಚುವರಿ ರೂ.17.50 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ 2235-02-103-0-62-059 ಯಿಂದ ಮರು ಹೊಂದಾಣಿಕೆ ಮಾಡಿಕೊಂಡು, ಒಟ್ಟು ರೂ.442.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರ್ಚ್ 2014ರ ಅಂತ್ಯದವರೆಗೆ ರೂ.442.50 ಲಕ್ಷಗಳ ವೆಚ್ಚ ಭರಿಸಲಾಗಿದೆ.</p> <p style="text-align: justify; ">2014-15ನೇ ಸಾಲಿನಲ್ಲಿ ರೂ.800.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಇದರಲ್ಲಿ ಮೊದಲನೇ ಕಂತಿನ ಅನುದಾನ ರೂ.356.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ನವೆಂಬರ್ 2014ರ ಅಂತ್ಯದವರೆಗೆ ರೂ.350.46 ಲಕ್ಷಗಳ ವೆಚ್ಚ ಭರಿಸಲಾಗಿದೆ.</p> <h3 style="text-align: justify; ">ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆ</h3> <p style="text-align: justify; ">ಗತ್ವ ಸಮಾನತೆಯನ್ನು ಖಚಿತ ಪಡಿಸಲು ಮತ್ತು ಮಹಿಳೆಯರನ್ನು ಅಬಿವೃದ್ದಿಯ ಮುಖ್ಯವಾಹಿನಿಯಲ್ಲಿ ತರಲು ನಿದಿಯನ್ನು ಅಂತರ-ವಲಯ ಹಂಚಿಕೆ ಮಾಡುವ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ದೃಷ್ಠಿಯಿಂದ ನಿರ್ದೇಶನಾಲಯದಲ್ಲಿ ದಿನಾಂಕ 03-05-2003ರಿಂದ ಕರ್ನಾಟಕ ಮಹಿಳಾ ಅಬಿವೃದ್ದಿ ಯೋಜನಾ ಘಟಕವನ್ನು ಪ್ರಾರಂಬಿಸಲಾಗಿದೆ. ಲಿಂಗತ್ವಕ್ಕೆ ಸಂಬಂಧಪಟ್ಟ ವಿಷಯಗಳನ್ನು ಬಗೆಹರಿಸಲು ಮೊದಲ ಬಾರಿಗೆ ಸರ್ಕಾರವು ಜಾಗೃತವಾದ ಮತ್ತು ಸಕಾರಾತ್ಮಕವಾದ ಪ್ರಯತ್ನ ಮಾಡಿದ್ದರಿಂದ ಈ ಆದೇಶವು ಹೆಗ್ಗುರುತಿನ ಧೋರಣಾತ್ಮಕ ಆದೇಶವಾಗಿರುತ್ತದೆ. ಸರ್ಕಾರದಲ್ಲಿ ವಿವಿಧ ಇಲಾಖೆಗಳ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಹಾಗೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಯಕ್ರಮಗಳಿಗೆ ಒದಗಿಸುವ ಸಂಪನ್ಮೂಲಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವುದೇ ಈ ಯೋಜನೆಯ ಉದ್ದೇಶವಾಗಿರುತ್ತದೆ.</p> <p style="text-align: justify; ">2013-14ನೇ ಸಾಲಿನಲ್ಲಿ 25 ಇಲಾಖೆಗಳು 301 ಕಾರ್ಯಕ್ರಮಗಳಡಿಯಲ್ಲಿ ಸದರಿ ಯೋಜನೆಗಾಗಿ ಅನುದಾನವನ್ನು ನಿಗದಿಪಡಿಸಿದೆ. ಈ ಇಲಾಖೆಗಲ್ಲಿ ಇರುವ ಒಟ್ಟು ಆಯವ್ಯಯ ರೂ.11334.27 ಕೋಟಿಗಳಲ್ಲಿ ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆಗಾಗಿ 1/3ಭಾಗ ಅಂದರೆ ರೂ.4591.50 ಕೋಟಿಗಳನ್ನು ನಿಗದಿಪಡಿಸಿದ್ದು ಮಾರ್ಚ್ 2014ರ ಅಂತ್ಯಕ್ಕೆ ರೂ.4777.40 ಕೋಟಿಗಳನ್ನು ಈ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿರುತ್ತಾರೆ.</p> <p style="text-align: justify; ">2014-15ನೇ ಸಾಲಿನಲ್ಲಿ 25 ಇಲಾಖೆಗಳು 237 ಕಾರ್ಯಕ್ರಮಗಳಡಿಯಲ್ಲಿ ಸದರಿ ಯೋಜನೆಗಾಗಿ ಅನುದಾನವನ್ನು ನಿಗದಿಪಡಿಸಿದೆ. ಈ ಇಲಾಖೆಗಲ್ಲಿ ಇರುವ ಒಟ್ಟು ಆಯವ್ಯಯ ರೂ.16193.72 ಕೋಟಿಗಳಲ್ಲಿ ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆಗಾಗಿ 1/3ಭಾಗ ಅಂದರೆ ರೂ.5768.13 ಕೋಟಿಗಳನ್ನು ನಿಗದಿಪಡಿಸಿದ್ದು ಸೆಪ್ಟೆಂಬರ್ 2014ರ ಅಂತ್ಯಕ್ಕೆ ರೂ.2862.94 ಕೋಟಿಗಳನ್ನು ಈ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿರುತ್ತಾರೆ.</p> <h3 style="text-align: justify; ">ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು</h3> <p style="text-align: justify; ">ಈ ಯೋಜನೆಯು ಉದ್ಯೋಗಸ್ಥ ಮಹಿಳೆಯರಿಗೆ, ವೃತ್ತಿ ತರಬೇತಿ ಪಡೆಯುವ ಮಹಿಳೆಯರಿಗೆ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಓದುತ್ತಿರುವ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಹಾಗು ಅವರಿಗೆ ಕೈಗೆಟಕುವ ವಸತಿ ಒದಗಿಸುವ ಉದ್ದೇಶ ಈ ಯೋಜನೆಯದ್ದಾಗಿರುತ್ತದೆ. ಭಾರತ ಸರ್ಕಾರವು ಮಹಿಳೆಯರ ಅಬಿವೃದ್ಧಿಗಾಗಿ ಶ್ರಮಿಸುತ್ತಿರುವ, ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳಿಗೆ, ಉದ್ಯೋಗಸ್ಥ ಮಹಿಳೆಯರ ವಸತಿನಿಲಯ ಕಟ್ಟಡ ನಿರ್ಮಿಸುವುದಕ್ಕೆ ಮತ್ತು ವಸತಿ ನಿಲಯ ಕಟ್ಟಡ ವಿಸ್ತರಿಸಲು ತಗಲುವ ಒಟ್ಟು ಅಂದಾಜು ವೆಚ್ಚದಲ್ಲಿ ಶೇಕಡ 75 ರಷ್ಟು ಆರ್ಥಿಕ ಸಹಾಯವನ್ನು ನೀಡುತ್ತಿದೆ. ಮಹಿಳೆಯರ ವಸತಿ ನಿಲಯ ನಿರ್ಮಾಣದ ಅಂದಾಜು ವೆಚ್ಚದ ಶೇಕಡಾ 12.5ರಷ್ಟು ಹಣವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ ಹಾಗೂ ಉಳಿದ 12.5 ಭಾಗವನ್ನು ಸಂಸ್ಥೆಯೇ ಭರಿಸಬೇಕಾಗುತ್ತದೆ. <br /><br />ಇದುವರೆಗೂ 76 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳಿಗೆ ಮಂಜೂರಾತಿ ನೀಡಲಾಗಿದ್ದು, ಅವುಗಳಲ್ಲಿ 66 ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. <br /><br />2013-14ನೇ ಸಾಲಿಗೆ ರಾಜ್ಯ ಸರ್ಕಾರವು ರೂ.15.60 ಲಕ್ಷಗಳ ಅನುದಾನವನ್ನು ಒದಗಿಸಿದ್ದು, ಕೇಂದ್ರ ಸರ್ಕಾರದ ಪಾಲಿನ ಅನುದಾನ ಬಿಡುಗಡೆಯಾಗದ ಕಾರಣ ಮಾರ್ಚ್ 2014ರ ಅಂತ್ಯದವರೆಗೆ ಖರ್ಚು ಭರಿಸಿರುವುದಿಲ್ಲ.</p> <p style="text-align: justify; ">2014-15ನೇ ಸಾಲಿಗೆ ಈ ಯೋಜನೆಯಡಿ ರಾಜ್ಯ ಸರ್ಕಾರವು ಅನುದಾನ ಒದಗಿಸಿರುವುದಿಲ್ಲ</p> <h3 style="text-align: justify; ">ಮಹಿಳೆಯರಿಗೆ ಆರ್ಥಿಕ ನೆರವು</h3> <p style="text-align: justify; ">ಮಹಿಳಾ ಕಾನೂನು ಪದವೀಧರರಿಗೆ ಕಾನೂನು ಆಡಳಿತದಲ್ಲಿ ತರಬೇತಿ ಪಡೆಯಲು ಆರ್ಥಿಕ ಸಹಾಯ ನೀಡಲಾಗುವುದು. ಕುಟುಂಬದ ವಾರ್ಷಿಕ ವರಮಾನ ರೂ.<strong> </strong>40,000/- ಗಳನ್ನು ಮೀರದ ಕಾನೂನು ಪದವಿ ಪಡೆದ ಮಹಿಳೆಯರು ಈ ಸಹಾಯವನ್ನು ಪಡೆಯಲು ಅರ್ಹರಿರುತ್ತಾರೆ. ತಿಂಗಳಿಗೆ 1,000/- ರೂಪಾಯಿಗಳಂತೆ ನಾಲ್ಕು ವರ್ಷಗಳ ಅವದಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಇದರ ಜೊತೆಗೆ ಕಾನೂನು ಪುಸ್ತಕಗಳನ್ನು ಖರೀದಿಸಲು 500/- ರೂಪಾಯಿಗಳನ್ನು ಮತ್ತು ತಮ್ಮ ಹೆಸರನ್ನು ಬಾರ್ ಕೌನ್ಸಿಲ್ನಲ್ಲಿ ನೊಂದಾಯಿಸಲು 460/- ರೂಪಾಯಿಗಳನ್ನು ನೀಡಲಾಗುತ್ತದೆ.</p> <p style="text-align: justify; ">2012-13ನೇ ಸಾಲಿನಿಂದ ಈ ಯೋಜನೆಯನ್ನು ಸ್ಟಗಿತಗೊಳಿಸಲಾಗಿದೆ</p> <h3 style="text-align: justify; ">ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ವಿಶೇಷ ಘಟಕ</h3> <p style="text-align: justify; ">ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಮದ್ಯ ಮತ್ತು ಮಾದಕ ವಸ್ತು ಸೇವನೆ ನಿಷೇಧ ಮುಂತಾದವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಿರ್ದೇಶನಾಲಯದಲ್ಲಿ ಒಂದು ವಿಶೇಷ ಘಟಕವು ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ದೊಂದಿಗೆ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.</p> <h3 style="text-align: justify; ">ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ, 2005ರ ಅನುಷ್ಠಾನ</h3> <p style="text-align: justify; ">ಸಂವಿಧಾನದಲ್ಲಿ ಖಾತ್ರಿ ಪಡಿಸಿರುವ ಮಹಿಳೆಯರ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆ ಮಾಡುವುದು ಈ ಕಾಯ್ದೆಯ ಉದ್ದೇಶ. ಕುಟುಂಬದೊಳಗಾಗುವ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂದಿಸಿದಂತೆ, ಹೆಚ್ಚು ಪರಿಣಾಮಕಾರಿಯಾದ ಸಂರಕ್ಷಣೆ ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಅದಿನಿಯಮ 2005 ಹಾಗೂ ನಿಯಮ 2006 ಅಕ್ಟೋಬರ್ 26ರಿಂದ ಜಾರಿಗೆ ಬಂದಿರುತ್ತದೆ ರಾಜ್ಯದಲ್ಲಿ ಈ ಕಾಯ್ದೆಯನ್ನು ಜೂನ್ 2007ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.<br /><br />ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಿಶು ಅಬಿವೃದ್ಧಿ ಯೋಜನಾದಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಅವರನ್ನು ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ರಕ್ಷಿಸಲು ಸಂರಕ್ಷಣಾದಿಕಾರಿಗಳೆಂದು ನೇಮಿಸಲಾಗಿದೆ. ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. <br /><br />ರಾಜ್ಯದ ಎಲ್ಲಾ ತಾಲ್ಲೂಕುಗಳ ಶಿಶು ಅಬಿವೃದ್ಧಿ ಯೋಜನಾದಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ದಿನಾಂಕ 26-11-2007 ರಿಂದ ಸ್ಥಾಪಿಸಲಾಗಿದ್ದು, ಆ ಕೇಂದ್ರಗಳಲ್ಲಿ ನುರಿತ ನ್ಯಾಯವಾದಿಗಳು ಪ್ರತಿ ಬುಧವಾರ ಮತ್ತು ಶನಿವಾರ ಉಚಿತ ಕಾನೂನು ಸಲಹೆ ನೀಡುತ್ತಿದ್ದಾರೆ. <br /><br />ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಮತ್ತು ಸಲಹೆ ಹಾಗು ಮಾರ್ಗದರ್ಶನ ಒದಗಿಸಲು ರಾಜ್ಯದಲ್ಲಿ ಸ್ವಾಧಾರ ಕೇಂದ್ರಗಳು, ಅಲ್ಪಾವದಿ ವಸತಿ ಗೃಹಗಳು, ಸಾಂತ್ವನ ಕೇಂದ್ರಗಳನ್ನು ರಕ್ಷಣಾ ಗೃಹಗಳೆಂದು ಅಧಿಸೂಚನೆ ಹೊರಡಿಸಲಾಗಿದ್ದು, ನೊಂದ ಮಹಿಳೆಯರು ಇಲ್ಲಿ ಸಮಾಲೋಚನೆ ಹಾಗೂ ರಕ್ಷಣೆ ಪಡೆಯಬಹುದಾಗಿದೆ. <br /><br />ಇದಲ್ಲದೆ 116 ಸ್ವಯಂಸೇವಾ ಸಂಸ್ಥೆಗಳನ್ನು ನೊಂದ ಮಹಿಳೆಯರಿಗೆ ಕಾನೂನು, ವೈದ್ಯಕೀಯ ಹಾಗೂ ಇತರೆ ನೆರವು ನೀಡಲು ಸೇವಾ ಸಂಸ್ಥೆಗಳು ಎಂದು ಅದಿಸೂಚನೆ ಹೊರಡಿಸಲಾಗಿದೆ. <br /><br />2013-14ನೇ ಸಾಲಿನಲ್ಲಿ ರೂ.600.00 ಲಕ್ಷಗಳ ಆಯವ್ಯಯ ಒದಗಿಸಲಾಗಿದ್ದು, ಮಾರ್ಚ್ 2014ರ ಅಂತ್ಯಕ್ಕೆ ರೂ.500.74 ಲಕ್ಷ ವೆಚ್ಚ ಭರಿಸಲಾಗಿದೆ.</p> <p style="text-align: justify; ">2014-15ನೇ ಸಾಲಿನಲ್ಲಿ ರೂ.800.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಅದರಲ್ಲಿ ರೂ.290.00ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ನವೆಂಬರ್ 2014ರ ಅಂತ್ಯದವರೆಗೆ ರೂ.234.63 ಲಕ್ಷ ವೆಚ್ಚ ಭರಿಸಲಾಗಿದೆ.</p> <h3 style="text-align: justify; ">ಕಾನೂನು ಸಾಕ್ಷರತಾ ಶಿಬಿರ</h3> <p style="text-align: justify; "><span>ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆವತಿಯಿಂದ ಮಹಿಳೆಯರ ಕಾನೂನುಗಳ ಬಗ್ಗೆ ಜಾಗೃತಿ ಶಿಬಿರಗಳನ್ನು ಎಲ್ಲಾ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಸಾರ್ವಜನಿಕರಿಗೆ ವಿವಿಧ ಕಾಯ್ದೆಗಳಾದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ,. ವರದಕ್ಷಿಣೆ ನಿಷೇಧ ಕಾಯ್ದೆ . ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಸಂಬಂದಿತ ಇತರೆ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲಾಗಿದೆ.</span></p> <h3 style="text-align: justify; "><span><span>ಕರ್ನಾಟಕ ವಿವಾಹ ನೋಂದಣಿ ಕಾಯ್ದೆ</span></span></h3> <p style="text-align: justify; "><span><span><span>ಈ ಕಾಯ್ದೆಯನ್ನು ದಿನಾಂಕ 1-4-2004 ರಂದು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಹಾಗೂ ಈ ಕಾಯ್ದೆಗೆ ರಾಜ್ಯದ ನಿಯಮಗಳನ್ನು 18-4-2006ರ ಅದಿಸೂಚನೆಯನ್ವಯ ಹೊರಡಿಸಲಾಗಿದೆ. ಇನ್ ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಕಮಿಷನರ್ ಆಫ್ ಸ್ಟ್ಯಾಂಪ್ಸ್ರವರನ್ನು ಮುಖ್ಯ ವಿವಾಹ ನೋಂದಣಾದಿಕಾರಿಗಳಾಗಿ ಅದಿಸೂಚಿಸಲಾಗಿದೆ. ಸ್ಟ್ಯಾಂಪ್ ಮತ್ತು ನೋಂದಣಿ ಇಲಾಖೆಯ ಸಬ್ ರಿಜಿಸ್ಟ್ರಾರ್ ರವರನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರನ್ನು ಗ್ರಾಮಾಂತರ ಮಟ್ಟದಲ್ಲಿ ವಿವಾಹ ನೋಂದಣಿ ಅದಿಕಾರಿಗಳನ್ನಾಗಿ ನೇಮಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಎಲ್ಲಾ ಧರ್ಮೀಯ ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಆದೇಶಿಸಿರುವುದರಿಂದ, ಪರಿಷ್ಕೃತ ಕರಡು ನಿಯಮಗಳನ್ನು ರಚಿಸಲಾಗಿದೆ</span></span></span></p> <h3 style="text-align: justify; "><span><span><span><span>ಸ್ವಾಧಾರ</span></span></span></span></h3> <p style="text-align: justify; "><span><span><span><span><span>ಕಷ್ಠಕರ ಪರಿಸ್ಥತಿಯಲ್ಲಿರುವ ಮಹಿಳೆಯರಿಗಾಗಿ ಯೋಜನೆ</span></span></span></span></span></p> <p style="text-align: justify; "><span><span><span><span><span>ಇದು ಕೇಂದ್ರ ವಲಯದ ಯೋಜನೆಯಾಗಿದ್ದು ಕಷ್ಠಕರ ಪರಿಸ್ಥಿತಿಯಲ್ಲಿರುವ ಅಂದರೆ ಪರಿತ್ಯಕ್ತೆಯರು, ವಿಧವೆಯರು , ಜೈಲಿನಿಂದ ಬಿಡುಗಡೆ ಹೊಂದಿದ ಮಹಿಳಾ ಖೈದಿಗಳು ಮತ್ತು ಕುಟುಂಬದ ಸಹಾಯವಿಲ್ಲದವರು, ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಒಬ್ಬಂಟಿಗರಾದ ಮಹಿಳೆಯರು , ಅನೈತಿಕ ಸಾಗಣೆಗೆ ಒಳಗಾಗಿ ವೇಶ್ಯಾಗೃಹಗಳಿಂದ ರಕ್ಷಿಸಿದ ಮಹಿಳೆ ಮತ್ತು ಹೆಣ್ಣು ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾದವರು ಹಾಗು ಯಾವುದೇ ಸಹಕಾರವಿಲ್ಲದ ಮಾನಸಿಕ ರೋಗದ ಮಹಿಳೆಯರು ಇತ್ಯಾದಿ ಮಹಿಳೆಯರಿಗೆ ಸಮಗ್ರ ಸೇವೆಗಳನ್ನು ಒದಗಿಸುವುದಾಗಿರುತ್ತದೆ. ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ, ಆಹಾರ, ಬಟ್ಟೆ, ಆರೋಗ್ಯ ಸೇವೆ, ಸಲಹೆ ಮತ್ತು ಮಾರ್ಗದರ್ಶನ ಮತ್ತು ನ್ಯಾಯ ಒದಗಿಸುವುದು ಸೇರಿದಂತೆ ಕೌಶಲ್ಯ ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡುವುದು ಯೋಜನೆಯ ಉದ್ದೇಶ.</span></span></span></span></span></p> <p style="text-align: justify; "><span><span><span><span><span>ಮಹಿಳೆಯರ ಪುನರ್ವಸತಿಯಲ್ಲಿ ಅನುಭವವಿರುವ ಆರ್ಥಿಕವಾಗಿ ಸದೃಢವಾದ ಎಲ್ಲಾ ಮೂಲಭೂತ ಅನುಕೂಲತೆಗಳನ್ನು ಹೊಂದಿದ, ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಅನುಭವವಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮಂಡಳಿ, ಸ್ಥಳೀಯ ನಗರ ಸಂಸ್ಥೆಗಳು ಹಾಗು ಮಹಿಳಾ ಅಬಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಕೇಂದ್ರಗಳಲ್ಲಿ ಮಹಿಳಾ ಸಹಾಯವಾಣಿ, ಸಲಹಾ ಕೇಂದ್ರ, ತರಬೇತಿ ಕೇಂದ್ರ ಹಾಗೂ ವೈದ್ಯಕೀಯ ಕೇಂದ್ರಗಳನ್ನು ನಡೆಸಲು ಅವಕಾಶವಿದೆ.</span></span></span></span></span></p> <p style="text-align: justify; ">ಪ್ರಸ್ತುತ ರಾಜ್ಯದಲ್ಲಿ 34 ಸ್ವಾಧಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ</p> <p style="text-align: justify; "><i><strong> ಮೂಲ : </strong></i> <a class="external-link ext-link-icon" href="http://dwcdkar.gov.in/index.php?option=com_content&view=article&id=50&Itemid=115&lang=hn" target="_blank" title="Ext link title"> ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ</a></p> </div>